Davanagere: ಕೆಲವೊಂದು ಬಾರಿ ಉಗುರಿನಲ್ಲಿ ಹೋಗೋದಕ್ಕೆ ಕೊಡಲಿ ತೆಗೆದುಕೊಂಡ್ರಂತೆ ಅಂತ ಹೇಳೋದನ್ನು ನಾವೆಲ್ಲರೂ ಕೇಳಿದ್ದೇವೆ. ಸಣ್ಣ ವಿಚಾರಕ್ಕೆ ಏನೆಲ್ಲಾ ದೊಡ್ಡದಾಗಿ ಆಗುತ್ತೆ ಅಂತಾನೂ ನೋಡಿದ್ದೇವೆ. ಇದೀಗ ದಾವಣಗೆರೆಯಲ್ಲಿ (Davanagere) ಕುರ್ ಕುರೇ (Kurkure) ವಿಚಾರಕ್ಕೆ 2 ಕುಟುಂಬಗಳ (Family) ನಡುವೆ ಮಾರಾಮಾರಿಯೇ ನಡೆದು ಹೋಗಿದೆ.
10ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ (Hospital) ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ 25 ಮಂದಿ ಊರನ್ನೇ ಬಿಟ್ಟು ಹೋಗಿದ್ದಾರೆ. ಅರೇ ಇದೇನಪ್ಪಾ ಒಂದು ಸಣ್ಣ ವಿಚಾರಕ್ಕೆ ಹೀಗೆಲ್ಲಾ ಆಯ್ತಾ ಅಂತ ನಿಮಗೆ ಶಾಕ್ ಆಗಬಹುದು.

ಆದರೂ ಇದು ನಿಜ ಒಂದು ಕುರ್ ಕುರೇ ವಿಚಾರಕ್ಕೆ ಶುರುವಾದ ಜಗಳ ಈಗ ಇಲ್ಲಿಗೆ ಬಂದು ನಿಂತಿದೆ. ಅಸಲಿಗೆ ನಡೆದಿದ್ದೇನು? 10 ಮಂದಿ ಯಾಕೆ ಆಸ್ಪತ್ರೆಗೆ ದಾಖಲಾದ್ರು? 25 ಮಂದಿ ಯಾಕೆ ಊರು ಬಿಟ್ಟು ಹೋದ್ರು? ಸಂಪೂರ್ಣ ಮಾಹಿತಿ ಮುಂದಿದೆ …
ಕ್ಲುಲಕ ಕಾರಣಕ್ಕೆ ಮಾರಾಮಾರಿ!
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೊನ್ನೆಬಾಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕ್ಷುಲಕ ಕಾರಣಕ್ಕೆ ಮಾರಾಮಾರಿಯಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹೊನ್ನೇಬಾಗಿಯ ಅತೀಫ್ ಉಲ್ಲಾ ಫ್ಯಾಮಿಲಿ ಹಾಗೂ ಸದ್ದಾಂ ಎಂಬ ಫ್ಯಾಮಿಲಿ ನಡುವೆ ಮಾರಾಮಾರಿ ನಡೆದಿದೆ. ಅತೀಪ್ ಉಲ್ಲಾ ಅದೇ ಗ್ರಾಮದಲ್ಲಿ ಸಣ್ಣದೊಂದು ಕಿರಾಣಿ ಅಂಗಡಿ ಇಟ್ಟುಕೊಂಡಿದ್ದರು.
ಕುರ್ಕುರೇ ವಿಚಾರಕ್ಕೆ ಮಾರಾಮಾರಿ!

ಅತೀಫ್ ಉಲ್ಲಾ ಅಂಗಡಿಯಲ್ಲಿ ಸದ್ದಾಂ ಕುಟುಂಬದ ಮಕ್ಕಳು ಕುರ್ಕುರೇ ಖರೀದಿ ಮಾಡಿದ್ದರು. ಎಕ್ಸಪರಿಯಾದ ಕುರ್ಕುರೇ ಮಾರಾಟ ಮಾಡಿದ್ದೀಯಾ ಬೇರೆಯದ್ದು ಕೊಡು ಅಂತ ಕೇಳಿದ್ದಕ್ಕೆ ಎರಡು ಕುಟುಂಬಸ್ಥರ ನಡುವೆ ಗಲಾಟೆಯಾಗಿದೆ ಅಂತ ಆರೋಪಿಸಲಾಗಿದೆ. ಈ ಸಮಯದಲ್ಲಿ ಅತೀಫ್ ಹಾಗೂ ಸದ್ದಾಂ ಕುಟುಂಬಸ್ಥರು ನಡುವೆ ವಾಗ್ವಾದ ನಡೆದಿದೆ. ಮಾತಿನ ಚಕಮಕಿ ಮೀತಿ ಮೀರಿ ಎರಡು ಕುಟುಂಬದ ಸದಸ್ಯರು ಪರಸ್ಪರ ಕೈ ಕೈ ಮೀಲಾಯಿಸಿದ್ದಾರೆ.
ರಸ್ತೆ ಬದಿ ಹೋಟೆಲ್ ಇಟ್ಟುಕೊಂಡು ಸದ್ದಾಂ ಫ್ಯಾಮಿಲಿ ಜೀವನ ನಡೆಸುತ್ತಿದ್ದರು. ವಾಗ್ವಾದ ಮತ್ತು ಗಲಾಟೆ ಹಿನ್ನೆಲೆ ಅತೀಫ್ ಮೇಲೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಸದ್ದಾಂ ದೂರು ದಾಖಲಿಸಿದ್ದಾರೆ. ಅದೇ ದ್ವೇಷ ಇಟ್ಟುಕೊಂಡು ಅತೀಫ್ ಕುಟುಂಬದ 30ಕ್ಕೂ ಹೆಚ್ವು ಜನರಿಂದ ಸದ್ದಾಂ ಕುಟುಂಬಸ್ಥರ ಮೇಲೆ ಹಲ್ಲೆ ಹಾಗೂ ಹೋಟೆಲ್ ಧ್ವಸಂ ಮಾಡಿರೋದಾಗಿ ಆರೋಪ ಕೇಳಿಬಂದಿದೆ.
ಗಲಾಟೆ ಬಿಡಿಸಲು ಬಂದವರ ಮೇಲೆಯೂ ಹಲ್ಲೆ!
ಎರಡು ಕಡೆಯವರ ಅಂಗಡಿಗಳು ಧ್ವಂಸ ಆಗಿದೆ ಮಾತುಗಳು ಕೇಳಿಬಂದಿದೆ. ಇನ್ನೂ ಗಲಾಟೆಯನ್ನು ಬಿಡಿಸಲು ಬಂದವರ ಮೇಲೆ ಹಲ್ಲೆ ಮಾಡಲಾಗಿದೆ. ಎರಡು ಕಡೆಯವರಿಂದ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಪೊಲೀಸರ ಭಿಗಿ ಭದ್ರತೆ ಇದೆ.
ಇನ್ನೂ ಬಂಧನ ಭೀತಿಯಿಂದ 25ಕ್ಕೂ ಹೆಚ್ಚು ಜನ ಗ್ರಾಮವನ್ನು ತೊರೆದಿದ್ದಾರೆ. ಕೂಡಲೇ ಹಲ್ಲೆ ಮಾಡಿದವರನ್ನು ಬಂಧಿಸಿ ಶಿಕ್ಷೇ ಕೊಡಿಸುವಂತೆ ಆಗ್ರಹ ಕೂಡ ಕೇಳಿಬಂದಿದೆ.
Published by
✍️ಪ್ರಶಾಂತ್ ಎಚ್ ವಿ
