ಹಾಸನ, ಡಿಸೆಂಬರ್‌ 26: ಮುಂದೆ ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ನಾನು ಸಿಎಂ ಆಗಿದ್ದ ಎರಡು ಅವಧಿಗಳಲ್ಲಿ ಅಪೂರ್ಣವಾಗಿರುವ ಎಲ್ಲಾ ಕೆಲಸಗಳನ್ನೂ ಆಗ ನಾವು ಮಾಡಿ ಮುಗಿಸುತ್ತೇವೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಸಕಲೇಶಪುರದಲ್ಲಿ ಕಾಫಿ ಬೆಳೆಗಾರರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಅವರು, 2006ರಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರಕಾರ ರಚನೆಯಾದಾಗ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದ್ದೇವೆ. ಅನೇಕ ಜನಪರ ಕಾರ್ಯಕ್ರಮಗಳ ಜಾರಿ ಬಾಕಿ ಉಳಿದಿದೆ. ಅವೆಲ್ಲವನ್ನೂ ಅನುಷ್ಠಾನಕ್ಕೆ ತರಬೇಕಾದರೆ ಮತ್ತೊಮ್ಮೆ ಮೈತ್ರಿ ಸರಕಾರ ಬರಬೇಕಿದೆ. ಶೀಘ್ರದಲ್ಲಿಯೇ ಬಂದೇ ಬರುತ್ತದೆ ಎಂದು ಹೇಳಿದರು.

ಮುಂದೆ ನಿಮ್ಮೆಲ್ಲರ ಆಶೀರ್ವಾದದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಬರುವ ಆಶಯವಿದೆ. ನನ್ನ ಕನಸಿನ ಕೆಲವು ಶಾಶ್ವತ ಯೋಜನೆಗಳು ಹಾಗೆಯೇ ಉಳಿದಿವೆ. ಅವುಗಳನ್ನೆಲ್ಲಾ ಸಾಕಾರಗೊಳಿಸಬೇಕಿದೆ. ರೈತರ ಬದುಕನ್ನು ಕಟ್ಟಿಕೊಡುತ್ತೇವೆ ಎಂದು ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಅವರು ಹೇಳಿದರು.

ಪ್ರಾಕೃತಿಕ ಕಾರಣ ಹಾಗೂ ಪ್ರತಿಕೂಲಕರ ಹವಾಮಾನದಿಂದ ಕಾಫಿ ಬೆಳೆಗಾರರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಜಾಗತಿಕ ಮಾರುಕಟ್ಟೆ ತಲ್ಲಣಗಳಿಂದ ಬೆಳೆಗಾರರು ಸಮಸ್ಯೆ ಎದುರಿಸುತ್ತಿದ್ದಾರೆ. 1991ರಲ್ಲಿ ದೇವೇಗೌಡರು ಸಂಸದರಾಗಿದ್ದರು. ಸಕಲೇಶಪುರದಲ್ಲಿ ನಡೆದ ಕಾಫಿ ಬೆಳೆಗಾರರ ಸಮಾವೇಶದಲ್ಲಿ ಅಂದಿನ ಕೇಂದ್ರ ಸಚಿವರಾಗಿದ್ದ ಐ.ಕೆ.ಗುಜ್ರಾಲ್ ಅವರು ಭಾಗವಹಿಸಿದ್ದರು. ಅಂದು ಗುಜ್ರಾಲ್ ಅವರಿಗೆ ದೇವೇಗೌಡರು ಕಾಫಿ ಬೆಳೆಗಾರರ ಸಮಸ್ಯೆ ವಿವರಿಸಿದ್ದರು. ಅವರನ್ನು ಬಿಟ್ಟರೆ ನಲವತ್ತು ವರ್ಷಗಳ ನಂತರ ಸಕಲೇಶಪುರಕ್ಕೆ ಬಂದಿರುವ ಕೇಂದ್ರ ಸಚಿವರು ಅಂದರೆ ಫಿಯುಷ್ ಗೋಯೆಲ್ ಅವರು ಮಾತ್ರ. ಅದಕ್ಕಾಗಿ ನಾನು ಗೋಯಲ್ ಅವರಿಗೆ ಆಭಾರಿ ಆಗಿದ್ದೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಪಿಯೂಷ್ ಗೋಯಲ್ ಅವರು ಸಕಲೇಶಪುರಕ್ಕೆ ಬಂದಿರುವ ಕಾರಣಕ್ಕೆ ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಖಂಡಿತವಾಗಿಯೂ ಪರಿಹಾರ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸ ನನಗಿದೆ ಎಂದು ಕೇಂದ್ರ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ಸಕಲೇಶಪುರ ಜನರು ಆನೆ ಹಾವಳಿಗೆ ತುತ್ತಾಗಿ ಬಹಳಷ್ಟು ಕಷ್ಟ ಎದುರಿಸುತ್ತಿದ್ದಾರೆ. ಈ ಬಗ್ಗೆ ದೆಹಲಿ ಮಟ್ಟದಲ್ಲಿ ಚರ್ಚೆಗಳು ನಡೆದಿವೆ. ನಾನೂ ಮನವಿ ಮಾಡಿದ್ದೇನೆ. ಕೇಂದ್ರದಲ್ಲಿ ಪರಿಸರ ಇಲಾಖೆ ಸಚಿವರು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಅವರ ಗಮನಕ್ಕೆ ಮತ್ತೊಮ್ಮೆ ಈ ವಿಷಯ ತರುತ್ತೇನೆ.

ಪಿಯೂಷ್ ಗೋಯಲ್ ಮತ್ತು ನಾನು ಭೇಟಿ ಮಾಡಿ ಮನವಿ ಮಾಡುತ್ತೇವೆ. ಆನೆ ಕಾರಿಡಾರ್ ನಿರ್ಮಾಣ ಮಾಡಲು ಅರಣ್ಯ ಇಲಾಖೆ ಹದಿನೈದು ಸಾವಿರ ಎಕರೆ ಗುರುತಿಸಿದೆ. ರೈತರು ಮೂರು ಸಾವಿರ ಎಕರೆ ಬಿಟ್ಟುಕೊಡಲು ಸಿದ್ದರಿದ್ದಾರೆ. ಆದರೆ ಆ ಯೋಜನೆ ನೆನೆಗುದಿಗೆ ಬಿದ್ದಿದೆ. ನಾನು ಮುಖ್ಯಮಂತ್ರಿಯಾದಾಗ ತಡೆಗೋಡೆ ನಿರ್ಮಾಣ ಮಾಡಲು ನೂರು ಕೋಟಿ ಬಿಡುಗಡೆ ಮಾಡಿದ್ದೆ ಎಂದು ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು.

ಕಸ್ತೂರಿ ರಂಗನ್ ವರದಿ ಬಗ್ಗೆ ಎಲ್ಲರಲ್ಲೂ ಆತಂಕ ಇದೆ. ಹೇಮಾವತಿ ನದಿಯ ನೀರು ಮಲೆನಾಡು ಭಾಗದ ಜನರ ತ್ಯಾಗದ ಫಲ. ಎತ್ತಿನಹೊಳೆ ಯೋಜನೆ ಹೆಸರಿನಲ್ಲಿ ರಸ್ತೆ ಅಭಿವೃದ್ಧಿ ಮಾಡಲು ಅನುಕೂಲವಾಗಿದೆ ಎಂದು ಅವರು ಹೇಳಿದರು. ದೇವೇಗೌಡರ ಮೇಲೆ ಅಪಾರ ಗೌರವ ಇಟ್ಟಿರುವ ನರೇಂದ್ರಮೋದಿ ಅವರು ತಮ್ಮ ಸಂಪುಟದಲ್ಲಿ ನನಗೊಂದು ಅವಕಾಶ ಮಾಡಿಕೊಟ್ಟಿದ್ದಾರೆ. ಅವರ ಕನಸಿನ ವಿಕಸಿತ ಭಾರತ್ ಸೇರಿದಂತೆ ಅನೇಕ ಯೋಜನೆಗಳನ್ನು ಸಾಕಾರಗೊಳಿಸಬೇಕು. ಆ ನಿಟ್ಟಿನಲ್ಲಿ ನಾವು ವೇಗವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.

Published by

✍️ಪ್ರಶಾಂತ್ ಎಚ್ ವಿ

Leave a Reply

Your email address will not be published. Required fields are marked *